ಇತರರ ಬದುಕಿನ ಸುಂದರ ಕ್ಷಣಗಳನ್ನು ಸೆರೆಹಿಡಿದು ಅದಕ್ಕೆ ಬಣ್ಣ ತುಂಬುವ ಛಾಯಾಗ್ರಾಹಕನ ಬದುಕಿನ ಕತ್ತಲ, ಬೆಳಕಿನ ದಿನಗಳನ್ನು ಆತನ ಜೀವನದ ಏರಿಳಿತಗಳನ್ನು ತೆರೆದಿಡುವ ಚಿತ್ರ ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ. ಊರ ಜನರ ಜೀವನದ ಖುಷಿಯ ಕ್ಷಣಗಳನ್ನು ತನ್ನ ಕ್ಯಾಮೆರಾದಲ್ಲಿ ಸುಂದರವಾಗಿ ಕಟ್ಟಿಕೊಡುವ ನಾಯಕ ಪುಟ್ಟು (ರಾಜೇಶ್ ಧ್ರುವ) ತನ್ನ ಜೀವನದಲ್ಲೇ ದೊಡ್ಡ ಆಘಾತವೊಂದನ್ನು ಎದುರಿಸಬೇಕಾಗುತ್ತದೆ. ಇತರರ ಸಂತಸದ ಕ್ಷಣಗಳಿಗೆ ಕಣ್ಣಾಗುವ ಫೋಟೋಗ್ರಾಫರ್ ನ ಕ್ಯಾಮೆರಾ ಹಿಂದಿನ ನಿಜ ಬದುಕು ಹೇಗಿರುತ್ತದೆ ಎಂಬುದನ್ನು ನಿರ್ದೇಶಕರೂ ಆಗಿರುವ ರಾಜೇಶ್ ಧ್ರುವ ಈ ಚಿತ್ರದಲ್ಲಿ ತೋರಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಪ್ರಕೃತಿಯ ಸೊಬಗು, ಅಲ್ಲಿನ ಭಾಷಾ ವೈವಿಧ್ಯತೆ ಹಾಗೂ ಸೊಗಡನ್ನು ಈ ಚಿತ್ರದಲ್ಲಿ ಕಾಣಬಹುದಾಗಿದೆ.
ಆ ಊರಲ್ಲಿ ತುಂಬಾ ವರ್ಷಗಳಿಂದ ಫೋಟೋ ಸ್ಟುಡಿಯೋ ಇಟ್ಟುಕೊಂಡಿರುವ ಪುಟ್ಟು, ಊರಿನಲ್ಲಿ ಯಾವುದೇ ಶುಭ ಸಮಾರಂಭ ನಡೆದರೂ ಅಲ್ಲಿ ಆತ ಹಾಜರಿರುತ್ತಾನೆ. ಫೋಟೋ ಜಲಜಪುಟ್ಟು ಊರಿನ ಎಲ್ಲರಿಗೂ ಅಚ್ಚುಮೆಚ್ಚು, ತನ್ನ ಕ್ಯಾಮರಾ ಮತ್ತು ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಎರಡೇ ತನ್ನ ಪ್ರಪಂಚ ಎಂದುಕೊಂಡಿದ್ದ ಪುಟ್ಟು ಬದುಕಿನಲ್ಲೊಂದು ದುರ್ಘಟನೆ ನಡೆದು ಆತನ ಜೀವನವನ್ನೇ ಬರ್ಬಾದ್ ಮಾಡಿಬಿಡುತ್ತದೆ. ಸ್ನೇಹಿತನ ಮದುವೆಯ ಪ್ರೀವೆಡ್ಡಿಂಗ್ ಶೂಟ್ ಮಾಡಲೆಂದು ಭಾವೀ ದಂಪತಿಗಳನ್ನು ಜಲಪಾತದ ಬಳಿ ಕರೆದುಕೊಂಡು ಬಂದ ಸಮಯದಲ್ಲಿ ದುರ್ಘಟನೆ ನಡೆಯುತ್ತದೆ. ಹಸೆಮಣೆ ಏರಬೇಕಿದ್ದ ಮದುಮಗಳು ನೇತ್ರಾ(ರಾಧಿಕಾ ಅಚ್ಯುತ ರಾವ್) ಭೋರ್ಗರೆವ ಜಲಪಾತದ ಪಾಲಾಗುತ್ತಾಳೆ. ಪ್ರೀತಿಯ ತಂಗಿಯನ್ನು ಕಳೆದುಕೊಡ ನೇತ್ರಾಳ ಅಣ್ಣ ಶಂಕರ, ಪುಟ್ಟು ಮೇಲಿನ ಕೋಪದಿಂದ ಆತನ ಕ್ಯಾಮೆರಾವನ್ನು ಚಚ್ಚಿಹಾಕುತ್ತಾನೆ. ಅಲ್ಲದೆ ಆತನ ಸ್ಟುಡಿಯೋಗೆ ಬೀಗ ಹಾಕುತ್ತಾನೆ. ಮುಂದೆ ದಾರಿ ಕಾಣದ ಪುಟ್ಟು, ನಗರಕ್ಕೆ ಬಂದು ಸ್ಟುಡಿಯೋ ಒಂದರಲ್ಲಿ ಕೆಲಸಕ್ಕೆ ಸೇರುತ್ತಾನೆ. ಅಲ್ಲಿಂದ ಮುಂದೇನಾಯಿತು, ಪುಟ್ಟು ತನ್ನ ಮೇಲೆ ಬಂದಿರುವ ಆರೋಪದಿಂದ ಮುಕ್ತನಾದನಾ, ಹಳ್ಳಿಯಲ್ಲಿ ಮತ್ತೆ ಬಾಲಾಜಿ ಫೋಟೋ ಸ್ಟುಡಿಯೋ ಪ್ರಾರಂಭವಾಯಿತಾ ಈ ಎಲ್ಲ ಪ್ರಶ್ನೆಗಳಿಗೆ ಉತ್ತರವನ್ನು ನಿರ್ದೇಶಕ ಧ್ರುವ ತೆರೆಮೇಲೆ ನೀಡಿದ್ದಾರೆ. ನಾಯಕ ರಾಜೇಶ್ ಧ್ರುವ ತನ್ನ ಸಹಜಾಭಿನಯದ ಮೂಲಕವೇ ನೋಡುಗರಿಗೆ ಇಷ್ಟವಾಗುತ್ತಾರೆ, ಒಬ್ಬ ನಟನಾಗಿ ಮತ್ತು ನಿರ್ದೇಶಕನಾಗಿಯೂ ರಾಜೇಶ್ ಸೈ ಎನಿಸಿಕೊಂಡಿದ್ದಾರೆ. ಛಾಯಾಗ್ರಹಣ, ಹಿನ್ನೆಲೆ ಸಂಗೀತ, ಸುಂದರವಾದ ಲೋಕೇಶನ್ಗಳು, ಹಾಡುಗಳು ಚಿತ್ರದ ಪ್ಲಸ್ ಪಾಯಿಂಟ್.